ಶನಿವಾರ, ಜನವರಿ 2, 2016

ಕನ್ನಡವೆಂದರೆ ಬರಿ ನುಡಿಯಲ್ಲ....

ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ
ಜಲವೆಂದರೆ ಕೇವಲ ನೀರಲ್ಲ
ಅದು ಪಾವನ ತೀರ್ಥ

ಕನ್ನಡವೆಂದರೆ ಬರಿ ನಾಡಲ್ಲ
ಭೂಪಟ, ಗೆರೆ, ಚುಕ್ಕೆ
ಮರವೆಂದರೆ ಬರಿ ಕಟ್ಟಿಗೆಯೆ?
ಶ್ರೀಗಂಧದ ಚಕ್ಕೆ

ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ
ದೇವರು ಕೇವಲ ವಿಗ್ರಹವಲ್ಲ
ಅಂತರ್ಭಾವ ಅನಂತ

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ, ವಿಧಾನ
ವಾಯುವೆಂದರೆ ಬರಿ ಹವೆಯೇ ಅಲ್ಲ
ಉಸಿರದು, ಪಂಚಪ್ರಾಣ

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು
ರವಿ ಶಶಿ ತಾರೆಯ ನಿತ್ಯೋತ್ಸವವದು
ಸರಸತಿ ವೀಣೆಯ ಸೊಲ್ಲು

- ಕೆ.ಎಸ್. ನಿಸಾರ್ ಅಹಮದ್

ಗಾಯನ: ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್, ಮಾಲತಿ ಶರ್ಮ

ಬೆಣ್ಣೆ ಕದ್ದನಮ್ಮ ಕೃಷ್ಣ ...

ಬೆಣ್ಣೆ ಕದ್ದನಮ್ಮ ಕೃಷ್ಣ 
ಬೆಣ್ಣೆ ಕದ್ದನಮ್ಮ
ಬೆಣ್ಣೆ ಕದ್ದು  ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು
ಸಿಡಿಯಲು ಸದ್ದು
ಬೆಚ್ಚಿದ ಗೋಪಿಯ ಕಂದನಮ್ಮ

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ತಾಯಿ ಸಿಟ್ಟನು ತಳೆದು
ಸೊಂಟಕೆ ಕೈಯಿಟ್ಟು
ಆದಳು ಅರೆಕ್ಷಣ
ಭೀಕರ ಕಾಳಿ
ದುರುದುರು ಕಣ್ಬಿಟ್ಟು

ಹಣೆ ತುಟಿ ಕೆನ್ನೆಗೆ
ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ
ಅರಳಿತು ಕೆಂದುಟಿ
ತುಂಟನಆಟಕ್ಕೆ

ತಪ್ಪಿದ ದಂಡಕೆ
ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲ
ತಟ್ಟನೆ ಅಳುವುದ  ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ
ಅರಳಿದ ಬೆಳದಿಂಗಳ ಜಾಲ

ಅವನ ಅಕುಟಿಲ
ಬೆಣ್ಣೆಯಂತ ನಗು
ಕಾಯಲಿ ಜಗದವರ
ಸಂತತ ನಗಿಸಲಿ ನಗದವರ

- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸಮೂಹ ಗಾನ

ಕುರಿಗಳು ಸಾರ್ ಕುರಿಗಳು...


ಕುರಿಗಳು ಸಾರ್ ಕುರಿಗಳು
ಸಾಗಿದ್ದೇ ಗುರಿಗಳು
ಮಂದೆಯಲ್ಲಿ ಒಂದಾಗಿ
ಸ್ವಂತತೆಯೇ ಬಂದಾಗಿ
ಅದರ ಬಾಲ ಇದು
ಮತ್ತೆ ಇದರ ಬಾಲ ಅದು ಮೂಸಿ
ದನಿ ಕುಗ್ಗಿಸಿ ತಲೆ ತಗ್ಗಿಸಿ
ಅಂಡಲೆಯುವ ನಾವು ನೀವು

ಎಡ ದಿಕ್ಕಿಗೆ ಬಲ ದಿಕ್ಕಿಗೆ
ಒಮ್ಮೆ ದಿಕ್ಕುಪಾಲಾಗಿ
ಹೇಗೆ ಹೇಗೋ ಏಗುತಿರುವ
ಬರೀ ಕಿರುಚಿ ರೇಗುತಿರುವ
ನೊಣ ಕೂತರೆ ಬಾಗುತಿರುವ
ತಿನ್ನದಿದ್ದರು ತೇಗುತಿರುವ
ಹಿಂದೆ ಬಂದರೊದೆಯದ
ಮುಂದೆ ಬರಲು ಹಾಯದ
ನಾವು ನೀವು ಅವರು ಇವರು

ನಮ್ಮ ಕಾಯ್ವ ಕುರುಬರು

ಶಾನುಭೋಗ ಗೀಚಿದ್ದಕ್ಕೆ
ಹೆಬ್ಬೆಟ್ಟನ್ನು ಒತ್ತುವವರು
ಜಮಾಬಂದಿಗಮಲ್ದಾರ ಬರಲು
ನಮ್ಮೊಳೊಬ್ಬನನ್ನ ಮೆಚ್ಚಿ
ಮಸೆದ ಮಚ್ಚ ಹಿರಿದು
ಕತ್ತ ಕಚಕ್ಕೆಂದು ಕೊಚ್ಚಿ
ಬಿರಿಯಾನಿಯ ಮೆಹರುಬಾನಿಯ
ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರು ನೋಟು ತುರುಕಿ
ನುಡಿಗೆ ಬೆಣ್ಣೆ ಹಚ್ಚುವವರು
ಬಿಸಿಲಿನಲ್ಲಿ ನಮ್ಮ ದೂಡಿ
ಮರದಡಿಯಲಿ ತಾವು ಕೂತು
ಮಾತು ಮಾತು ಮಾತು ಮಾತು
ಮಾತಿನ ಗೈರತ್ತಿನಲ್ಲೆ
ಕರಾಮತ್ತು ನಡೆಸುವವರು
ನಮ್ಮ ಮೈಯ ತುಪ್ಪಟವ
ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ
ಯೋಜನೆಗಳ ಹಾಕುವವರು
ತಳವೂರಿದ ಕುರುಬ ಕಟುಕನಾದ
ಅವನ ಮಚ್ಚು ಆಹ!
ಏನು ಹೊಳಪು
ಏನು ಜಾದು
ಏನು ಮೋಹ!
ಕಣ್ಣು ಕುಕ್ಕಿ ಸೊಕ್ಕಿರುವ
ಕತ್ತನದಕೆ ತಿಕ್ಕಿರುವ
ಹೋಗಿ ಹೋಗಿ ನೆಕ್ಕಿರುವ
ನಾವು ನೀವು ಅವರು ಇವರು
ಕುರಿಗಳು ಸಾರ್ ಕುರಿಗಳು!

- ಕೆ.ಎಸ್.ನಿಸಾರ್ ಅಹಮದ್
ಸಂಗೀತ/ಗಾಯನ: ಮೈಸೂರು ಅನಂತಸ್ವಾಮಿ

ನೀ ನುಡಿಯದಿರಲೇನು?....

ನೀ ನುಡಿಯದಿರಲೇನು
ಬಯಲಾಗಿಹುದು ಎಲ್ಲ
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ
ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ

ದೇಹವಿಡಿ ಕಣ್ಣಾಗಿ
ಕಾದಿರಲು ಹಂಬಲಿಸಿ
ನಲವಿರದ ನಗೆಯಿಂದ
ಮನವ ಮುರಿದೆ
ಮಹದಾಸೆಗಳ ತುಳಿದು
ವಿಕಟಟ್ಟಹಾಸದಲಿ
ಮೆರೆದಿರುವ ನೋಟದಲಿ
ನನ್ನನಿರಿದೆ

ಬಾಡಿರುವ ಮೊಗದಲ್ಲಿ
ಕಳೆ ಇರದ ಕಣ್ಣಲ್ಲಿ
ನಿನ್ನ ಸಿರಿವಂತಿಕೆಯ
ಕಾಣುವಾಸೆ
ಸೊಗವಿರದ ತುಟಿಯಲ್ಲಿ
ತೂಗಿರುವ ನಗೆಯಲ್ಲಿ
ಚೆಲುಗನಸಿನಿರುಳುಗಳ
ಹುಡುಕುವಾಸೆ

ನಿನ್ನ ನಗೆ ಮಲ್ಲಿಗೆಯ
ನನ್ನೊಲವ ರಸದಲ್ಲಿ
ಬೆಳೆಸುವೆನು ಎಂದೆಂದು
ಎಂದೆ ನೀನು
ಇಂದೇಕೆ ಈ ವಿರಸ
ಏಕಯ್ಯೋ ಆಭಾಸ
ನಂಬದೆಯೆ ಶಂಕಿಸಿದೆ
ಹೃದಯ ತಾನು

ಅರೆ ಗಳಿಗೆ ಸುಖಸ್ವಪ್ನ
ಬರಲಾರದೆಮ್ಮೊಡನೆ
ವಾಸ್ತವತೆ ಗಹಗಹಿಸಿ
ಸೆಳೆಯಲಿಹುದು
ಮರೆತೆಲ್ಲ ಕೊನೆಗೊಮ್ಮೆ
ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು
ಹಿಡಿಯಬಹುದು

- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸುಲೋಚನ

ನಾಡ ದೇವಿಯೆ ಕಂಡೆ ನಿನ್ನ ಮಡಿಲಲ್ಲಿ...

ನಾಡ ದೇವಿಯೆ ಕಂಡೆ
ನಿನ್ನ ಮಡಿಲಲ್ಲಿ
ಎಂಥ ದೃಶ್ಯ
ನೋವು ನಗೆಯ
ಸಮ್ಮಿಶ್ರದಲ್ಲಿ
ಎದೆ ಆಯಿತದಕೆ ವಶ್ಯ

ಒಂದೆದೆಯ ಹಾಲ
ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ
ಒಂದೆ ನೆಲದ
ರಸ ಹೀರಲೇನು
ಸಿಹಿ ಕಹಿಯ ರುಚಿಯ ಕಾಯಿ

ಕತ್ತಲಲ್ಲಿ ಕಂಗೆಟ್ಟು
ಎಡವಿ ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು
ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ

ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ
ಹೊಟ್ಟೆ ಹೇಡಿಗೆಯ ಬಿಚ್ಚಿ 
ಹಸಿದ ಹಾವನ್ನು ಚುಚ್ಚಿ ಕೆಣಕಿ
ಯುಕ್ತ ರಾಗದಲಿ ಕುಣಿಸಿ ದಣಿಸಿ
ನಲಿದಿಹರು ಹಲರು ಬದುಕಿ

ನರನನ್ನೆ ಗಾಳವಾಗಿಸುತ
ಬಾಳ ನೀರಲ್ಲಿ ನಲಿವ ನರಿಗೆ
ಸಾವೊಂದು ಎನುವ ಸತ್ಯಕ್ಕೆ
ಅಡ್ಡಗಾಲೆಳೆವ ನಾಡಿನರಿಗೆ
ಎಚ್ಚರವ ನೀಡಿ ತಿದ್ದುತ್ತಲಿರಲಿ
ಕವಿ ಭಾವವೆಂಬ ಬಡಿಗೆ
ತಾಯಿ ಭಾರತಿಯೆ ಇದುವೆ
ನಿನಗೆ ನಾ ಸಲಿಸಲಿರುವ ಕೊಡುಗೆ

- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ/ಗಾಯನ: ಮೈಸೂರು ಅನಂತಸ್ವಾಮಿ

ನಾ ನಿನಗೆ ಎನಿತು ಉಪಕಾರಿಯೊ...

ನಾ ನಿನಗೆ ಎನಿತು ಉಪಕಾರಿಯೊ
ಪ್ರಭುವೆ
ನಾ ನಿನಗೆ ಎನಿತು ಆಭಾರಿಯೊ

ಮೀನಿಗಿರುವಂತೆ ನದಿವಾರಿಯೊ
ಸಕಲ ಜೀವಿಗಳ ಉತ್ತಾರಿಯೊ

ನಿನ್ನ ಎಂದೆಂದೂ ನಾ ಮರೆಯೆನು
ನಿನ್ನ ನಾಮವ ನಾ ತೊರೆಯೆನು
ಅಂತರಂಗದಲಿ ಸದ್ಭಕ್ತಿ ತುಂಬಿ
ಸತತ ಧ್ಯಾನಿಸುವೆ ನಿನ್ನನ್ನೆ ನಂಬಿ

ಬಾನ ಬೆಳಕಿನ ಮೂಲವು ನೀನು
ಪ್ರಾಣದಳುಕಿಗೆ ಧೈರ್ಯದ ಭಾನು
ನಿನ್ನ ಕೃಪೆ ನಭದ ರವಿಚಂದ್ರ ತಾರೆ
ಗಾಳಿಯಾಡದು ಆಣತಿಯ ಮೀರೆ

ಕಣ್ಣ ಮುನ್ನೋಟ ಬೆಂಬಲವು ನೀನೆ
ಜೀವಜೀವದ ಹಂಬಲವು ನೀನೆ
ಚೇತನಾಚೇತನದ ಆಂತರ್ಯ ಭಾವ
ಲೋಕಜೀವದುಧೋ ಉಸಿರಾಟ ದೇವ

- ಡಾ|| ನಿಸಾರ್ ಅಹಮ್ಮದ್
ಸಂಗೀತ: ಪದ್ಮಚರಣ್
ಗಾಯನ: ರತ್ನಮಾಲಾ ಪ್ರಕಾಶ್ & ಸುರೇಖಾ

ಎಲ್ಲ ಮರೆತಿರುವಾಗ .....

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನಿನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ?

ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ
 
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ
ಬೆನ್ನಲ್ಲೆ ಇರಿಯದಿರು ಓ! ಚೆನ್ನ ನೆನಪೇ
 
-ಕೆ ಎಸ್ ನಿಸಾರ್ ಅಹಮದ್

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ

ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದಾ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತೆಲ್ಲ ಬಿಗಿದಿದೆ ದುಃಖ ಕೊರಳ

ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ

ರಚನೆ: ಡಾ|| ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಎಂ ಡಿ ಪಲ್ಲವಿ