ಶನಿವಾರ, ಜನವರಿ 2, 2016

ನೀ ನುಡಿಯದಿರಲೇನು?....

ನೀ ನುಡಿಯದಿರಲೇನು
ಬಯಲಾಗಿಹುದು ಎಲ್ಲ
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ
ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ

ದೇಹವಿಡಿ ಕಣ್ಣಾಗಿ
ಕಾದಿರಲು ಹಂಬಲಿಸಿ
ನಲವಿರದ ನಗೆಯಿಂದ
ಮನವ ಮುರಿದೆ
ಮಹದಾಸೆಗಳ ತುಳಿದು
ವಿಕಟಟ್ಟಹಾಸದಲಿ
ಮೆರೆದಿರುವ ನೋಟದಲಿ
ನನ್ನನಿರಿದೆ

ಬಾಡಿರುವ ಮೊಗದಲ್ಲಿ
ಕಳೆ ಇರದ ಕಣ್ಣಲ್ಲಿ
ನಿನ್ನ ಸಿರಿವಂತಿಕೆಯ
ಕಾಣುವಾಸೆ
ಸೊಗವಿರದ ತುಟಿಯಲ್ಲಿ
ತೂಗಿರುವ ನಗೆಯಲ್ಲಿ
ಚೆಲುಗನಸಿನಿರುಳುಗಳ
ಹುಡುಕುವಾಸೆ

ನಿನ್ನ ನಗೆ ಮಲ್ಲಿಗೆಯ
ನನ್ನೊಲವ ರಸದಲ್ಲಿ
ಬೆಳೆಸುವೆನು ಎಂದೆಂದು
ಎಂದೆ ನೀನು
ಇಂದೇಕೆ ಈ ವಿರಸ
ಏಕಯ್ಯೋ ಆಭಾಸ
ನಂಬದೆಯೆ ಶಂಕಿಸಿದೆ
ಹೃದಯ ತಾನು

ಅರೆ ಗಳಿಗೆ ಸುಖಸ್ವಪ್ನ
ಬರಲಾರದೆಮ್ಮೊಡನೆ
ವಾಸ್ತವತೆ ಗಹಗಹಿಸಿ
ಸೆಳೆಯಲಿಹುದು
ಮರೆತೆಲ್ಲ ಕೊನೆಗೊಮ್ಮೆ
ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು
ಹಿಡಿಯಬಹುದು

- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸುಲೋಚನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ