ಶನಿವಾರ, ಜನವರಿ 2, 2016

ಕನ್ನಡವೆಂದರೆ ಬರಿ ನುಡಿಯಲ್ಲ....

ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ
ಜಲವೆಂದರೆ ಕೇವಲ ನೀರಲ್ಲ
ಅದು ಪಾವನ ತೀರ್ಥ

ಕನ್ನಡವೆಂದರೆ ಬರಿ ನಾಡಲ್ಲ
ಭೂಪಟ, ಗೆರೆ, ಚುಕ್ಕೆ
ಮರವೆಂದರೆ ಬರಿ ಕಟ್ಟಿಗೆಯೆ?
ಶ್ರೀಗಂಧದ ಚಕ್ಕೆ

ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ
ದೇವರು ಕೇವಲ ವಿಗ್ರಹವಲ್ಲ
ಅಂತರ್ಭಾವ ಅನಂತ

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ, ವಿಧಾನ
ವಾಯುವೆಂದರೆ ಬರಿ ಹವೆಯೇ ಅಲ್ಲ
ಉಸಿರದು, ಪಂಚಪ್ರಾಣ

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು
ರವಿ ಶಶಿ ತಾರೆಯ ನಿತ್ಯೋತ್ಸವವದು
ಸರಸತಿ ವೀಣೆಯ ಸೊಲ್ಲು

- ಕೆ.ಎಸ್. ನಿಸಾರ್ ಅಹಮದ್

ಗಾಯನ: ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್, ಮಾಲತಿ ಶರ್ಮ

1 ಕಾಮೆಂಟ್‌: